Wednesday, 27 August 2014

ರಕ್ತ ಸಂಬಂಧ

ಅಂದು ಶನಿವಾರ. ಆ ದಿನ ಶರತ್ ಗೆ ಸಂತಸದ ಕ್ಷಣ. ಹಲವಾರು ದಿನಗಳ ಪ್ರಯತ್ನದ ಬಳಿಕ ನೌಕರಿ ಸಿಕ್ಕಿತ್ತು. ಸೋಮವಾರದಿಂದ ಹೊಸ ಕಂಪೆನಿಯನ್ನು join ಆಗಬೇಕಿತ್ತು. ಆತ ತನಗೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿದ. ಆಗ ಕುಮಟಾದಿಂದ ಶರತನ ಚಿಕ್ಕಮ್ಮ ಕಲಾವತಿ ಬಂದಳು. "Job ಸಿಕ್ಕಿದ ಖುಷಿಯಲ್ಲಿ ನಮ್ಮನ್ನೆಲ್ಲಾ ಮರೆಯಬೇಡ ಶರತ" ಎಂದು ಹೇಳಿದಳು ಚಿಕ್ಕಮ್ಮ. "ನಿಮ್ಮನ್ನೆಲ್ಲಾ ಹೇಗೆ ಮರೆಯಲು ಸಾಧ್ಯ? ನಿಮ್ಮ ಮಾರ್ಗದರ್ಶನವು ನನಗೆ ಯಾವಾಗಲು ಅಗತ್ಯ" ಎಂದನು ಶರತ್.
ಶರತನು ಅಜ್ಜನ ಮನೆಗೆ ಹೋಗದೆ ತುಂಬಾ ದಿನಗಳು ಆಗಿದ್ದವು. ಒಮ್ಮೆ ಅಜ್ಜಿ, ಮಾವ, ಅತ್ತೆಯನ್ನು ಭೇಟಿಯಾಗಿ ಹೋಗಬಹುದಲ್ಲ ಎಂದೆನಿಸಿತು. ಚಿಕ್ಕಮ್ಮನ ಜೊತೆ ಶರತನು ಅಜ್ಜನ ಮನೆಗೆ ಹೊರಟ. ಶಿರಸಿಯಿಂದ ಸುಮಾರು ೧೫ ಕಿ.ಮಿ. ಆಗುತ್ತಿತ್ತು ಆ ಹಳ್ಳಿ. ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಮೇಲೆ ಹೊರಟನು ಅವನು ಚಿಕ್ಕಮ್ಮನ ಜೊತೆ. ಅಜ್ಜನ ಮನೆಗೆ ಬಂದು ಇಳಿದನು ಶರತ್. ಅಜ್ಜಿಗೆ ಮೊಮ್ಮಗನನ್ನು ನೋಡಿ ಆನಂದಭಾಷ್ಪ. "ಎಷ್ಟು ದಿನವಾಗಿತ್ತು ಮರಿ ನಿನ್ನನ್ನು ನೋಡದೆ. ಚೆನ್ನಾಗಿದ್ದೀಯ?" ಎಂದಳು ಅಜ್ಜಿ.
"ನಾನು ಚೆನ್ನಾಗಿ ಇದ್ದೇನೆ. ನನಗೆ ನೌಕರಿ ಸಿಕ್ಕಿದೆ ಅಜ್ಜಿ. ಇವತ್ತು ರಾತ್ರಿ VRL ಬಸ್ ನಲ್ಲಿ ಬೆಂಗಳೂರಿಗೆ ಪಯಣ" ಎಂದನು ಶರತ್.
"ಆಗಲಿ ಮಗ. ಒಳ್ಳೆ ನೌಕರಿ ಸಿಕ್ಕಿತಲ್ಲ. ಇನ್ನು ಒಳ್ಳೆ ಹೆಂಡತಿ ಕೂಡ ಸಿಗಲಿ" ಎಂದು ಶುಭ ಹಾರೈಸಿದಳು.
"ತಮಾ ಎಷ್ಟು ವರ್ಷವಾಗಿತ್ತು ನಿನ್ನನ್ನು ನೋಡದೆ. ಉನ್ನತ ವ್ಯಾಸಂಗಕ್ಕಾಗಿ ನೀನು ಶಿರಸಿ ಊರನ್ನು ಬಿಟ್ಟ ಬಳಿಕ ನಿನ್ನನ್ನು ನೋಡಿಯೇ ಇರಲಿಲ್ಲ. ಇವತ್ತು ನೋಡಿ ಸಂತೋಷವಾಯಿತು" ಎಂದಳು ಶರತನ ಅತ್ತೆ ಮೇಧಾ.
"ಇಂದು ಮುಹೂರ್ತ ಕೂಡಿ ಬಂದಿದೆ ನೋಡಿ ಅತ್ತೆ" ಎಂದು ಶರತ್ ನಗುತ್ತಾ ಹೇಳಿದನು.
ಒಳಗೆ ಹೋಗಿ ಚಹಾ ಕುಡಿದು ಹಲಸಿನಕಾಯಿ ಸಂಡಿಗೆ ತಿನ್ನುತ್ತ ತಾನು ಇಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡನು ಶರತ್. ಆತನ ಕಣ್ಣಲ್ಲಿ ನೀರು ತುಂಬಿತ್ತು.
ಆಗ "ನನಗಿಂತಲೂ ಎತ್ತರವಾಗಿಬಿಟ್ಟಿದ್ದೀಯಲ್ಲ ಶರತ್. ನೆನಪಿದೆಯಾ? ನೀನು ಚಿಕ್ಕವನಾಗಿದ್ದಾಗ ಇದೇ ಜಾಗದಲ್ಲಿ ಕ್ರಿಕೆಟ್ ಬ್ಯಾಟ್, ಬಾಲ್, ಸ್ಟಂಪ್ ಎಲ್ಲಾ ಇಡುತಿದ್ದೆ" ಎಂದು ಕೊಟ್ಟಿಗೆಯ ಹಿಂಭಾಗದಲ್ಲಿ ಇರುವ ಒಂದು ಚೀಲವನ್ನು ತೋರಿಸುತ್ತ ಹೇಳಿದನು ಶರತನ ಮಾವ ರಘುರಾಮ.
"ನೆನಪಿದೆ ಮಾವ. ಅವೆಲ್ಲಾ golden moments" ಎಂದನು ಶರತ್.
ಆಗ ಮಾವನ ಹಿರಿಯ ಮಗಳು ಶಿಲ್ಪಾ ಬಂದಳು. ಇವರೆಲ್ಲಾ ತಮ್ಮ ಮನೆಗೆ ಯಾಕಾದರೂ ಬಂದಿದ್ದಾರೋ ಎಂಬ ಮುಖ ಮಾಡುತ್ತಾ ಮನಸ್ಸಿಲ್ಲದ ಮನಸ್ಸಿನಿಂದ "ಶರತ್ ಭಾವ, ಕಲತ್ತೆ" ಎಂದು formality ಗೋಸ್ಕರ ಮಾತನಾಡಿಸಿ ತಾನು ಮೊಬೈಲ್ ನಲ್ಲಿ ಯಾರೊಟ್ಟಿಗೋ ಮಾತನಾಡುತ್ತ busy ಆದಳು.
ಶಿಲ್ಪಾಳಿಗೆ ಇಬ್ಬರು ತಂಗಿಯರು. ಸುರಕ್ಷಾ ಮತ್ತು ಸಮೀಕ್ಷಾ (ಅವಳಿ ಸಹೋದರಿಯರು). ಅವರಿಬ್ಬರೂ ಈಗ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರು ಕೂಡ ಇವನು ಯಾಕಾದರೂ ಬಂದ ಎನ್ನುವ ಮುಖ ಮಾಡುತ್ತ formality ಗೋಸ್ಕರ "ಶರತಣ್ಣ" ಎಂದು ಮಾತನಾಡಿಸಿ ನಾಪತ್ತೆ ಆದರು. ಅವನಿಗೆ ವಿಚಿತ್ರವೆನಿಸಿತು. "ಸುರಕ್ಷಾ ಸಮೀಕ್ಷಾ ಇಬ್ಬರನ್ನೂ ಎತ್ತಿ ಆಡಿಸಿದವನು ನಾನು. ಇವರೂ ಕೂಡ ಹಿರಿಯಕ್ಕನ ಹಾಗೆ ಆಗಿಬಿಟ್ಟರಾ?" ಎನಿಸಿತು.
"ಶಿಲ್ಪಾಳಿಗೆ ಮೊದಲಿನಿಂದಲೂ ದೊಡ್ಡಸ್ತಿಕೆ ಸೊಕ್ಕು. ಆದರೆ ಅವಳಿ ಸಹೋದರಿಯರು ಹೀಗೆ ಇರಲಿಲ್ಲ. ಅವರು ಕೂಡ ಬದಲಾಗಿಬಿಟ್ಟರಾ? ಶಾಲೆಗೆ ಅವರಿಬ್ಬರ admission ಮಾಡಿಸುವಾಗ ತಾನು ಹಾಗೂ ತನ್ನ ತಾಯಿ ಮುಂದಾಳತ್ವ ವಹಿಸಿದ್ದು ಇವರಿಗೆ ನೆನಪಿಲ್ಲವೇ? ಸದಾ ತನ್ನ ಸ್ವಂತ ತಂಗಿಯರ ಹಾಗೆ ನೋಡಿಕೊಂಡಿದ್ದೆ. ಆದರೆ ಈಗ ಅದಕ್ಕೆ ಬೆಲೆ ಇಲ್ಲವೇ? ರಕ್ತ ಸಂಬಂಧ ಎನ್ನುವುದು ಇಷ್ಟೇನಾ?" ಎಂದುಕೊಂಡು ಒಮ್ಮೆ ಮನಸ್ಸಿಗೆ ನೋವಾಯಿತು.
ಆದರೆ ಮರುಕ್ಷಣ ಶರತ್ ಗೆ ಅಲ್ಲಿ ಗೋಡೆಯ ಮೇಲೆ ತನ್ನ ಸ್ವರ್ಗವಾಸಿ ಅಜ್ಜನ ಫೋಟೋ ಕಾಣಿಸಿತು.ಅಜ್ಜನ ಫೋಟೋಕ್ಕೆ ನಮಸ್ಕಾರ ಮಾಡಿ "ಪರಿವರ್ತನೆ ಜಗದ ನಿಯಮ. ನಾವು ಒಳ್ಳೆಯದನ್ನು ಮಾಡಿದ್ದರೆ ಒಂದಲ್ಲಾ ಒಂದು ದಿನ ನಮಗೂ ಒಳ್ಳೆಯದೇ ಆಗುತ್ತದೆ. भगवान के घर मे  देर है, अंधेर नही.  ನನಗೆ ಒಳ್ಳೆ ಉದ್ಯೋಗ ಸಿಕ್ಕಿದೆ. ನಿಮ್ಮ ಆಶೀರ್ವಾದ ಸದಾ ಇರಲಿ" ಎಂದು ಮನಸ್ಸಿನಲ್ಲೇ ಹೇಳಿಕೊಂಡ. 
ಅಜ್ಜಿ, ಮಾವ, ಅತ್ತೆಗೆ ನಮಸ್ಕಾರ ಮಾಡಿ "ಬರುತ್ತೇನೆ" ಎಂದ ಶರತ್ ಚಿಕ್ಕಮ್ಮನ ಜೊತೆ ವಾಪಸ್ ಶಿರಸಿಗೆ ಹೋದ. ರಕ್ತ ಸಂಬಂಧ ಎನ್ನುವುದಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದುದು ಎಂದುಕೊಂಡು ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು VRL ಬಸ್ ಏರಿ ಕುಳಿತ.






3 comments:

  1. ಬಹಳ ಚೆನ್ನಾಗಿದೆ... ರಕ್ತ ಸಂಬಂಧ ಎನ್ನುವುದಕ್ಕಿಂತ ಭಾವನಾತ್ಮಕ ಸಂಬಂಧ ಶ್ರೇಷ್ಠವಾದದ್ದು ಅಂತ quote ಮಾಡಿದ್ದು ತುಂಬಾ ಇಷ್ಟ ಆಯಿತು... :)

    ReplyDelete
    Replies
    1. ಧನ್ಯವಾದಗಳು :)

      Delete
    2. This comment has been removed by the author.

      Delete