Wednesday, 24 September 2014

ಬಾಂಧವ್ಯ ಮಾತ್ರ ಸಿಹಿ ಸಿಹಿ

ಸುಮಾರು ಎರಡು ವರ್ಷಗಳ ಹಿಂದೆ, ಹೀಗೆ ಸಮಯ ಕಳೆಯಲು ಸಾಮಾಜಿಕ ಜಾಲತಾಣ ಫೇಸ್ಬುಕ್ ನ ಒಂದು ಗ್ರೂಪ್ ನಲ್ಲಿ ಕಾಮೆಂಟ್ ಮಾಡುತ್ತಿದ್ದೆ. ಆಗ ಒಬ್ಬ ವ್ಯಕ್ತಿ ಅಲ್ಲಿ ಒಂದು ಪೋಸ್ಟ್ ಹಾಕಿ ತುಂಬಾ ಜನರ ವಿರೋಧ ಎದುರಿಸುತ್ತಿದ್ದ. ಪೋಸ್ಟ್ ಕೂಡ ವಿವಾದಾತ್ಮಕವಾಗಿತ್ತು. ಆದರೆ ಆತ ಅಲ್ಲಿ ಯಾರಿಗೂ ನೋವಾಗುವ ರೀತಿಯಲ್ಲಿ ಕಾಮೆಂಟ್ ಮಾಡಿರಲಿಲ್ಲ. ಎಲ್ಲರು ಆತನಿಗೆ ಬೈದು ಕಾಮೆಂಟ್ ಮಾಡುತ್ತಿದ್ದರು. ಆತ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದ್ದ (ವಾದ ಮಾಡುತ್ತಿದ್ದ). ಗುಂಪಿಗೆ ಹೊಸ ಸದಸ್ಯನಾದ ಕಾರಣ ಅಲ್ಲಿನ active ಸದಸ್ಯರು ಯಾರೂ ಅವನಿಗೆ ಪರಿಚಯ ಇರಲಿಲ್ಲ. ನನಗೆ ಆತ ಯಾರು ಅಂತ ಗೊತ್ತಿರಲಿಲ್ಲ. ಹೋಗಲಿ ಯಾರೋ ಹೊಸಬ ಇರಬೇಕು ಎಂದು ಸುಮ್ಮನೆ ಕಾಮೆಂಟ್ ಮಾಡಲು ಹೋಗಲಿಲ್ಲ. ಮರುದಿನ ಪುನಃ ಫೇಸ್ಬುಕ್ ಓಪನ್ ಮಾಡಿದಾಗ ಆ ಪೋಸ್ಟ್ ನಲ್ಲಿ ಮತ್ತಷ್ಟು ಕಾಮೆಂಟ್ ಗಳು. ೫-೬ ಸದಸ್ಯರು ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ಬೈದಿದ್ದರು. ಆತ ಬೇಸರಗೊಂಡು ಗುಂಪನ್ನು ಬಿಟ್ಟು ಹೋಗಿದ್ದ. ಆ ವ್ಯಕ್ತಿಯು ನನ್ನ inbox ಗೆ ಮೆಸೇಜ್ ಮಾಡಿದ್ದ. "ನಾವು ಉತ್ತಮ ಗೆಳೆಯರಾಗಿ ಇರೋಣ. ಈ ಗುಂಪಿನ ಸಹವಾಸ ಸಾಕು ನನಗೆ. ನಾನು ಗುಂಪನ್ನು ಬಿಡುತ್ತಿದ್ದೇನೆ. ಬಾಂಧವ್ಯ ಮಾತ್ರ ಸಿಹಿ ಸಿಹಿ ಗೆಳೆಯ" ಎಂದು.
ಆಗ ಅವನು ಯಾರು, ಏನು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಒಂದೇ ಮೆಸೇಜ್ ಮಾಡಿ "ನೋಡಿ ಸರ್. ಫೇಸ್ಬುಕ್ ನಲ್ಲಿ ಇದೆಲ್ಲಾ ಸಾಮಾನ್ಯ. ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಹಿಡಿಸದೇ ಇರಬಹುದು. ನೀವು ಅಷ್ಟಕ್ಕೇ ಬೇಜಾರಾಗಿ ಗುಂಪು ಬಿಡಬೇಡಿ. ದಯವಿಟ್ಟು ಪುನಃ ಬನ್ನಿ" ಎಂದಿದ್ದೆ.
ಅದಕ್ಕೆ ಅವರು "ನಾನು ತೀಕ್ಷ್ಣವಾದಿ. ಗುಂಪಿಗೆ ನಾನು ಮತ್ತೆ ಬರುವುದಿಲ್ಲ. ಆದರೆ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ. ನನ್ನ ಫೋನ್ ನಂಬರ್ ತಗೋ ಗೆಳೆಯ" ಎಂದರು.
ಆಯಿತು ಬಿಡಿ. ಅಲ್ಲಿಗೆ ಕಥೆ ಮುಗಿಯಿತು ಎಂದುಕೊಂಡು ನಾನು ಅಲ್ಲಿಗೆ ಆ ವಿಷಯ ಬಿಟ್ಟೆ.
ಅದಾಗಿ ಎರಡು ವಾರಗಳ ಬಳಿಕ ಮತ್ತೆ ನನಗೆ ಮೆಸೇಜ್ ಬಂತು "ದೋಸ್ತಾ, ನಾನು ನಿನ್ನನ್ನು ಭೇಟಿ ಆಗಬೇಕು. ನಮ್ಮ ಮನೆಗೆ ಬರಬಹುದಾ?" ಎಂದು. ಮನೆ ವಿಳಾಸವನ್ನು ಕಳಿಸಿದ್ದರು ಅವರು. ಒಂದು ದಿನ ಫೋನ್ ಮಾಡಿಕೊಂಡು ಅವರ ಮನೆಗೆ ಹೋದೆ. ಆ ವ್ಯಕ್ತಿಯನ್ನು ಮಾತನಾಡಿಸುವಾಗ ನನ್ನ ಗಂಟಲು ಕಟ್ಟಿ ಬಂದು ಕಣ್ಣುಗಳು ಮಂಜಾದವು. ಆದರೂ ಹೇಗೋ ಸುಧಾರಿಸಿಕೊಂಡೆ. ಆತ ಸಾಹಿತ್ಯ ಲೋಕದಲ್ಲಿ ಕಳೆದ ೧೫ ವರ್ಷಗಳಿಂದ ಸಾಕಷ್ಟು ಸಾಧನೆ ಮಾಡಿದ್ದ. ತುಂಬಾ ಹೆಸರು ಗಳಿಸಿದ್ದ. ನನಗೆ ಇವೆಲ್ಲಾ ತಿಳಿದಿದ್ದು ಆತನ ಭೇಟಿಯಾದ ಬಳಿಕ. ಆ ವ್ಯಕ್ತಿಯು osteogenesis imperfecta ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಹಾಸಿಗೆಯ ಮೇಲೆಯೇ ಇಡೀ ಜೀವನವನ್ನು ಮಹಾಯಾತನೆಯಲ್ಲಿ ಕಳೆದಿದ್ದ. ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದರೂ ಅವರ ಕಲ್ಪನಾಶಕ್ತಿಯನ್ನು ಕಂಡು ಬೆರಗಾದೆ.
ಅವರು ಹಲವಾರು ಕವನಗಳನ್ನು ಬರೆದಿದ್ದರು. ಅವರು ಬರೆದ ಒಂದು ಪುಸ್ತಕವನ್ನೂ ನನಗೆ ನೀಡಿದರು. ಅಂದಿನಿಂದ ಶುರುವಾದ ಗೆಳೆತನ ಎರಡು ವರ್ಷಗಳ ಬಳಿಕ ಮತ್ತಷ್ಟು ಗಟ್ಟಿಯಾಗಿದೆ. ಫೇಸ್ಬುಕ್ ನಿಂದ ಪರಿಚಯವಾದ ವ್ಯಕ್ತಿ ನನಗೆ ಸ್ವಂತ ಅಣ್ಣನ ಹಾಗೆ ಆಗಿಬಿಟ್ಟ. ಪ್ರತಿ ಸಲ ಊರಿಗೆ ಹೋದಾಗ ಒಮ್ಮೆಯಾದರೂ ಅವರ ಮನೆಗೆ ಹೋಗಿ ಮಾತನಾಡಿಸಿ ಬರುತ್ತೇನೆ. ಅವರಿಗೂ ಖುಷಿ. ನನಗೂ ಖುಷಿ. ಅವರಿಂದ ಜೀವನದಲ್ಲಿ ಸಾಕಷ್ಟು ಕಲಿತಿದ್ದೇನೆ. ಕಲಿಯುತ್ತಲೂ ಇದ್ದೇನೆ. ಕೆಲವೊಮ್ಮೆ ಫೇಸ್ಬುಕ್ ನಿಂದ ಸಜ್ಜನರ ಪರಿಚಯವಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ನಮ್ಮ ನಡುವಿನ ಬಾಂಧವ್ಯ ಮಾತ್ರ ಯಾವಾಗಲೂ ಸಿಹಿ ಸಿಹಿ.

Friday, 19 September 2014

ಮೊದಲ ಬಾರಿ ಹಾಸ್ಟೆಲ್ ಸೇರಿದಾಗ

ಯಾವತ್ತೂ ತಂದೆ ತಾಯಿಯನ್ನು ಬಿಟ್ಟು ಇರದಿದ್ದ ನನಗೆ ದ್ವಿತೀಯ ಪಿ.ಯು.ಸಿ. ಮುಗಿದ ಬಳಿಕ ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಧಾರವಾಡಕ್ಕೆ ಹೋಗಬೇಕಾಯಿತು. ಮನಸ್ಸು ಒಪ್ಪದಿದ್ದರೂ ಶಿರಸಿಯಲ್ಲಿ ಇಂಜಿನಿಯರಿಂಗ್ ಕಾಲೇಜ್ ಇಲ್ಲವಲ್ಲ, ಹೋಗಲೇಬೇಕು ಎಂದು ಹೊರಟೆ. ಎಸ್.ಡಿ.ಎಂ. ಕಾಲೇಜ್ ನ ಕ್ಯಾಂಪಸ್ ಅದ್ಭುತವಾಗಿತ್ತು. ಆದರೆ ಬಯಲು ಸೀಮೆಯ ಹವಾಮಾನಕ್ಕೆ ನಾನು ಹೊಂದುಕೊಂಡು ಹೋಗಬಹುದೇ ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತಿತ್ತು. ಎರಡು ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ. ಆ ರೀತಿ ಇತ್ತು ನನ್ನ ಆರೋಗ್ಯ. ಅಂತು ಕಾಲೇಜ್ ಎಡ್ಮಿಶನ್ ಮುಗಿಯಿತು. ಕಾಲೇಜ್ ಹಾಸ್ಟೆಲ್ ನಲ್ಲೇ ಇರುವುದು ಎಂದು ಕೂಡ ನಿರ್ಣಯ ತೆಗೆದುಕೊಳ್ಳಲಾಯಿತು. ಹಾಸ್ಟೆಲ್ ಗೆ ಎಡ್ಮಿಶನ್ ಮಾಡಿಸಲು ಹೊರಟೆವು. ವಿಜಯ್ ರಾವ್ ಎಂಬ ವ್ಯಕ್ತಿಯ ಪರಿಚಯವಾಯಿತು. ಅವರು ಕಾಲೇಜ್ ನಲ್ಲಿ ಅಕೌಂಟ್ಸ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ನೆಂಟರು ವಿಜಯಾ ಬ್ಯಾಂಕ್ ನಲ್ಲಿ ಇದ್ದರು. ನನ್ನ ತಂದೆ ಕೂಡ ವಿಜಯಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ತಂದೆಗೂ ಅವರು ಪರಿಚಯವಿದ್ದರು. ಹಾಗಾಗಿ “ಸರ್, ನೀವು ಕಾಳಜಿ ಮಾಡಬೇಡಿ. ನಾನು ಇದ್ದೇನೆ. ನಿಮ್ಮ ಮಗನಿಗೆ ಬೇಕಾದ ರೂಂ ಮೇಟ್ ಕೊಡಿಸುತ್ತೇನೆ. ಆದಷ್ಟು ನಿಮ್ಮ ಊರಿನವರು ಅಥವಾ ಹವ್ಯಕರು ಆಗಲಿ” ಎಂದರು. ವಿಜಯ್ ರಾವ್ ನಿಜಕ್ಕೂ ಒಬ್ಬ ನಿಗರ್ವಿ, ಸರಳ ವ್ಯಕ್ತಿತ್ವ ಹೊಂದಿದ್ದ ಮನುಷ್ಯ ಆಗಿದ್ದರು. ನಾನು ಸ್ವಲ್ಪ ನರ್ವಸ್ ಆಗಿದ್ದೆ. ವಿಜಯ್ ರಾವ್ ಅವರು ಮೂಲತಃ ಮಂಗಳೂರಿನವರು. ಆದರೆ ಅವರು ಧಾರವಾಡಕ್ಕೆ ಬಂದು ೨೫ ವರ್ಷವಾಗಿತ್ತು. ತುಳು ಮಾತನಾಡುತ್ತಿದ್ದರು ದಕ್ಷಿಣ ಕನ್ನಡದ ಸುಮಾರು ಶೆಟ್ಟಿ ಹುಡುಗರ ಜೊತೆ. ಕೆಲವು ಶೆಟ್ಟಿ ಸೀನಿಯರ್ಸ್ ಪರಿಚಯವಾದರು. “ಅವರ್ಯಾರೂ ಹಾಸ್ಟೆಲ್ ನಲ್ಲಿ ಇರುವುದಿಲ್ಲ. ಗಾಂಧಿನಗರದಲ್ಲಿ ಇರ್ತಾರೆ. ಏನಾದರು ತೊಂದರೆ ಆದರೆ, ಯಾರಾದರು ragging ಮಾಡಿದರೆ ಇವರಿಗೆ ತಿಳಿಸು. ಇವರು ನೋಡಿಕೊಳ್ಳುತ್ತಾರೆ” ಎಂದರು ವಿಜಯ್ ರಾವ್. ಅದರಲ್ಲಿ ಒಬ್ಬ ಆದಿತ್ಯ ಶೆಟ್ಟಿ, ಇನ್ನೊಬ್ಬ ಅವಿನಾಶ್ ಶೆಟ್ಟಿ. ಉದ್ದ ಕೂದಲು (ಆಗಿನ ಮಹೇಂದ್ರ ಸಿಂಗ್ ಧೋನಿ ತರಹ), ಕಿವಿಗೆ ಲೋಲಾಕ್, ಕೈಗೆ ಬಳೆ, ಕುತ್ತಿಗೆಗೆ ಚೈನ್, ಆ ಚೈನ್ ಗೆ ಜೋತಾಡುತ್ತಿದ್ದ ಬ್ಲೇಡ್, ಬೆಕ್ಕಿನ ಕಣ್ಣು, ಕೆನ್ನೆಯ ಮೇಲೆ ಏನೋ ಗಾಯದ ಕಲೆ. ನೋಡಲು ಖತರ್ನಾಕ್ ಇದ್ದ ಆತ. ಅವನ ಮೊಬೈಲ್ ನಂಬರ್ ಅನ್ನು ನನಗೆ ನೀಡಿದ. “ತಮಾ, ಅರ್ಜೆಂಟ್ ಇದ್ದರೆ message ಮಾಡು" ಎಂದ. ಅದಕ್ಕೆ ನಾನು “ನನ್ನ ಹತ್ತಿರ ಮೊಬೈಲ್ ಇಲ್ಲ ಅಣ್ಣ. ನಾನು ಕಾಯಿನ್ ಬಾಕ್ಸ್ ನಿಂದ ನಿಮಗೆ ಕಾಲ್ ಮಾಡ್ತೇನೆ " ಎಂದೆ. ಆಯಿತು ಎಂದು ಅವನು ಯಮಹಾ ಆರ್.ಎಕ್ಸ್ ಬೈಕ್ ಮೇಲೆ ಹೋದ. ನನಗೆ ಹಾಸ್ಟೆಲ್ ನಲ್ಲಿ ರೂಂ ನಂಬರ್ ೬೩೬ ಕೊಟ್ಟಿದ್ದರು. “ಅಲ್ಲಿ ಇನ್ನು ಇಬ್ಬರು ಬರಲಿದ್ದಾರೆ ನಿನ್ನ ರೂಂ ಗೆ. ಸಧ್ಯ ನೀನು ಒಬ್ಬನೇ ಇರಬಹುದು. ಕೆಳಗಿನ ವಿಂಗ್ ನಲ್ಲಿ ಫೈನಲ್ ಇಯರ್ ಸ್ಟೂಡೆಂಟ್ಸ್ ಇದ್ದಾರೆ. ಅವರಿಂದ ದೂರ ಇರು. ಅವರು ಜೂನಿಯರ್ಸ್ ಗೆ ತೊಂದರೆ ಕೊಡಬಹುದು. ರಾತ್ರಿ ೧೦:೩೦ರ ನಂತರ ರೂಂ ಹೊರಗೆ ಬರಬೇಡ” ಎಂದು ಹೇಳಿದರು ಹಾಸ್ಟೆಲ್ ಮ್ಯಾನೇಜರ್ ಜೋಶಿ ಸರ್. “ಹಾಸ್ಟೆಲ್ ವಾರ್ಡನ್ ನಾಳೆ ಬರುತ್ತಾರೆ. ಅವರನ್ನ ಭೇಟಿ ಆಗು. ಅವರ ಹೆಸರು ಎ.ವಿ.ಬಳ್ಳುಳಾಯ ಅಂತ. ಅವರು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ನ ಪ್ರೊಫೆಸರ್” ಅಂತ ಹೇಳಿದರು ಜೋಶಿಯವರು. ಮರುದಿನ ನನ್ನ ರೂಂ ಗೆ ಒಬ್ಬ ಬಂದ. ಅವನು ಹೆದರುತ್ತ ಬಂದ. “ನಾನು ನಿಮ್ಮ ರೂಂ ಮೇಟ್. ನನಗೆ ಈಗ ರೂಂ allot ಮಾಡಿದ್ದಾರೆ” ಎಂದ. ಬಂದು ತನ್ನ ಗಂಟು ಮೂಟೆಯನ್ನು ರೂಂ ನ ಒಂದು ಮೂಲೆಯಲ್ಲಿ ಇಟ್ಟ. ಆ ಬ್ಯಾಗ್ ನೋಡಿದರೆ ಎಷ್ಟೋ ವರ್ಷದ ಧೂಳು ಅದರ ಮೇಲೆ ಇದ್ದ ಹಾಗೆ ಕಾಣುತ್ತಿತ್ತು. ಅರ್ಧ ಪೇಂಟು ಕಿತ್ತು ಹೋಗಿದ್ದ ಕಪಾಟಿನಲ್ಲಿ ಅವನು ತನ್ನ ವಸ್ತುಗಳನ್ನು ಇಟ್ಟನು. ನಂತರ ಅವನು ನನ್ನನ್ನು ಕೇಳಿದ “ನಿಮ್ಮ ಹೆಸರೇನು? ನಿಮ್ಮ ಊರು ಯಾವುದು?” ನಾನು “ಅಂಕಿತ್ ಹೆಗಡೆ. ನಾನು ಶಿರಸಿಯವನು” ಎಂದೆ. ಅವನ ಮುಖ ಅರಳಿತು. “ನೀವು ಹವ್ಯಕರಾ?” ಅಂತ ಕೇಳಿದ. ನಾನು “ಹೌದು” ಎಂದೆ. ಆಗ ಅವನು “ನಾನು ಅಭಿಷೇಕ್ ಜೊಯ್ಸ್ ಅಂತ. ನಾನು ಕೂಡ ಹವ್ಯಕ. ನಾನು ಸಾಗರದ ಹತ್ತಿರ ಕಟ್ಟಿನಕೇರೆ ಎಂಬ ಊರಿನವನು” ಅಂತ ಹೇಳಿದನು. ನನಗೆ ಒಂಥರಾ ಖುಷಿ. ನಮ್ಮವನು ಇದ್ದಾನಲ್ಲ ನನ್ನ ಜೊತೆ ಎಂದು. ಆ ದಿನ ನನ್ನ ಸೀನಿಯರ್ ಆದರ್ಶ್ ನಾಯಕ್ ನನ್ನ ಭೇಟಿಯಾಗಲು ಬಂದಿದ್ದನು. ಅವನು ಮೂಲತಃ ಅಂಕೋಲಾದವನು. ನಾನು ನಿಪ್ಪಾಣಿಯಲ್ಲಿ ಇದ್ದಾಗ ಅವನು ನನಗೆ ಪರಿಚಯವಾಗಿದ್ದನು. ಅವನ ತಂದೆ ನನ್ನ ತಂದೆಯ ಆತ್ಮೀಯ ಗೆಳೆಯರಾಗಿದ್ದರು. ಅವನು ರೂಮಿಗೆ ಬಂದು ನನ್ನೊಡನೆ ಮಾತನಾಡುತ್ತಿದ್ದನು. ಅಭಿಷೇಕ್ ಜೊಯ್ಸ್ ಸ್ನಾನ ಮಾಡಲು ಬಕೆಟನ್ನು ಎತ್ತುಕೊಂಡು ಹೋದನು. ಆ ಬಕೆಟ್ ನೋಡಿದರೆ ಹೇಸಿಗೆ ಆಗುತ್ತಿತ್ತು. ಬಕೆಟ್ ಖರೀದಿ ಮಾಡಿದ ದಿನದಿಂದ ಇದುವರೆಗೂ ಒಮ್ಮೆಯೂ ಅದನ್ನು ಸ್ವಚ್ಛವಾಗಿ ತೊಳೆದಿರಲಿಲ್ಲ ಎಂಬುದು ಗೊತ್ತಾಗುತ್ತಿತ್ತು.

ಧ್ರುವತಾರೆ

ಸುಮಾರು ೭ ತಿಂಗಳುಗಳ ಬಳಿಕ ನನ್ನ ಆತ್ಮೀಯರಾದ ರಮೇಶಣ್ಣ (ರಮೇಶ್ ಹೆಗಡೆ) ಅವರನ್ನು ಭೇಟಿಯಾದೆ. ಕಳೆದ ವರ್ಷ ನನಗೆ ಅವರು ಬರೆದ "ನೋವಿನಲಿ ನವಿಲು ಗರಿ" (ಕನ್ನಡ ಗಝಲ್ ಗಳು) ಎಂಬ ಪುಸ್ತಕವನ್ನು ಕೊಟ್ಟಿದ್ದರು. ಈ ಬಾರಿ ಅವರ ಇನ್ನೊಂದು ಕವನಗುಚ್ಛ "ಮನದಲ್ಲಿ ಮನೆಯ ಮಾಡಿ..." ಯನ್ನು ಕೊಟ್ಟಿದ್ದಾರೆ. ಅದನ್ನು ಓದಿ ಮುಗಿಸಿದೆ. ಅದರಲ್ಲಿ ಅವರು ನಮ್ಮೆಲ್ಲರ ಹೆಮ್ಮೆಯ ಧ್ರುವತಾರೆ ದಿ|| ಕಲ್ಪನಾ ಚಾವ್ಲಾರ ಬಗ್ಗೆ ಒಂದು ಕವನ ಬರೆದಿದ್ದಾರೆ. ನನಗೆ ತುಂಬಾ ಇಷ್ಟವಾಯಿತು. ಅದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಚುಕ್ಕಿ - ಚಂದ್ರರ ಕಡೆಯೇ
ಹೊಳೆವ
ಕಣ್ಣ ನೆಟ್ಟವಳು ;
ಮೊದಲ ಹೆಜ್ಜೆ ಇಟ್ಟವಳು ಇವಳು ...
ಹಕ್ಕಿ - ಪಕ್ಕಿಯ ತೆರದಿ ...
ತಾ - ಹಾರಬೇಕೆಂಬ
ಕನಸನುಟ್ಟವಳು !

ಕನಸುಗಳೇ ಗರಿಗೆದರಿ...
ಎಲ್ಲ ಪರಿಧಿಯ ಮೀರಿ,
ಮೇಲೇರಿ ಹಾರಿದವಳು, ಇವಳು
ತಾಯ್ನೆಲದ ಘನತೆಯನು
ಮುಗಿಲೆತ್ತರ ಸಾರಿದವಳು !
ಓ ಧೀರ ವನಿತೆ...
ಅನಂತದ ಗಗನವೇ
ಅಂತ್ಯ ಹಾಡಿತೆ - ನಿನಗೆ,
-ಮಸಣವಾಯಿತೆ ಕೊನೆಗೆ ?
ಶೋಕಸಾಗರವು
ನಿನ್ನ ತವರುಮನೆಗೆ !
ನಿನ್ನಗಲಿಕೆಯ
ನೋವು - ನೆನಪಾಗಿ
ಕಾಡದಿರದು - ನಮಗೆ !
ಆದರೂ,
ಒಂದು ರೀತಿಯ ಹೆಮ್ಮೆ
ನಿನ್ನ ಸಾವು ;
ನೆಲದಲ್ಲೇ
ತೊದಲು ನುಡಿದೆ,
ಬಾನಲ್ಲಿ ಕೊನೆಗೆ ಮಡಿದೆ !!
ಇನ್ನೇನು ಬೇಕು ಮತ್ತೆ ?
ಹಂಸಗೀತೆಯಲ್ಲೂ
ನೀ - ವೀರ ಗಾಥೆ !!